*****ಗಂಡಿಕೋಟ (Gandikota)*****
ಪ್ರಕೃತಿ ವೈಚಿತ್ರ್ಯಗಳ ಕೌತುಕ...ಭಾರತದ ಮಹಾಕಂದಕ.
( The grand canyon of India )
ಕಣಿವೆಯ ಮೇಲ್ಬಾಗದಲ್ಲಿ ನಿಂತು ಪ್ರಪಾತದಾಳಕ್ಕೊಂದು ಕಲ್ಲೆಸೆದರೆ ತಳ ಸೇರೋದು ಬಿಟ್ಟು,ಅರ್ಧ ದಾರಿ ಕ್ರಮಿಸುತ್ತಿದ್ದಂತೆಯೇ ಪುನಃ ಮೇಲ್ಮುಖವಾಗಿ ಚಲಿಸಲು ಮೊದಲಾಗೋದನ್ನೆಲ್ಲಿಯಾದರೂ ಕಂಡಿದ್ದೀರಾ?ನಂಬಲಸಾಧ್ಯಾದರೂ ಇಂತಹದ್ದೊಂದು ವೈಚಿತ್ರ್ಯವಿರೋದು ಆಂದ್ರಪ್ರದೇಶದ ಕಡಪ ಜಿಲ್ಲೆಗೆ ಸೇರಿದ ಜಮ್ಮಲಮಡುಗು ಎಂಬ ಊರಿನಿಂದ ಹದಿನೈದು ಕಿಮೀ ದೂರದಲ್ಲಿರೋ ಗಂಡಿಕೋಟ ಎಂಬ ಗ್ರಾಮದಲ್ಲಿ.
ಮೂರು ಕಡೆ ಪ್ರಕೃತಿ ಇರ್ಮಿತ ನೂರಾರು ಅಡಿಗಳ ಕಂದಕದ ತಡೆಗೋಡೆ,ಅದರ ಆಳದಲ್ಲಿ ರಭಸವಾಗಿ ಹರಿಯುತ್ತಿರೋ ನದಿ,ಮತ್ತೊಂದೆಡೆ ಸುಮಾರು ಹತ್ತಿಪ್ಪತ್ತು ಕಿಮೀ ಉದ್ದಗಲಕ್ಕೂ ಮೈ ಚಾಚಿಕೊಂಡಿರೋ ಕಲ್ಲುಬಂಡೆಗಳು ಹಾಗೂ ಕುರುಚಲು ಗಿಡಗಳಿಂದಾವೃತವಾದ ಬಯಲು ಪ್ರದೇಶ.ಇಂತಹದ್ದೊಂದು ಅದ್ಭುತ ರಕ್ಷಣಾ ವ್ಯವಸ್ಥೆಯ ನಡುವಲ್ಲಿರೋ ಎರ್ರಿಮಲೈ ಪರ್ವತದ ಮೇಲೆ ತಮ್ಮದೊಂದು ಸಾಮ್ರಾಜ್ಯ ಸ್ಥಾಪಿಸಿಕೊಂಡು 300ವರ್ಷಗಳಿಗೂ ಅಧಿಕ ಕಾಲ ಆಳ್ವಿಕೆ ನಡೆಸಿದ್ದು ವಿಜಯನಗರದ ಅರಸರ ಸಾಮಂತರೂ,ಸೇನೆಯ ಪ್ರಬಲ ಶಕ್ತಿಯೂ ಆಗಿದ್ದ ಪೆಮ್ಮಸಾನಿಗಳು.
ಈ ವಂಶದ ರಾಜರುಗಳಲ್ಲಿ ಪ್ರಮುಖನಾದ ಕುಮಾರ ತಿಮ್ಮಾನಾಯಕನ ಕಾಲದಲ್ಲಿ ನಿರ್ಮಾಣವಾಯಿತೆನ್ನಲಾಗುವ ಬಲಾಢ್ಯ ಕೋಟೆಯೇ ಗಿರಿದುರ್ಗ,ಜಲದುರ್ಗ,ಕಮರಿದುರ್ಗ ಎಂದೆಲ್ಲಾ ಪ್ರಖ್ಯಾತವಾಗಿರೋ,ಮೀರ್ ಜುಮ್ಲಾ ನಿಂದ ದಾಳಿಗೀಡಾಗಿ ಲೂಟಿಗೊಂಡು ಮತ್ತೊಂದು ಹಂಪಿಯಂತೆ ಕಂಡುಬರೋ ಗ್ರಾಂಡ್ ಕ್ಯಾನಿಯನ್ ಆಫ್ ಇಂಡಿಯಾ ಎಂಬ ಖ್ಯಾತಿಯ ಗಂಡಿಕೋಟ.
ಸುಮಾರು ಎಂಟು ಕಿಮೀ ಸುತ್ತಳತೆಯಲ್ಲಿ ನಲವತ್ತು ಅಡಿ ಎತ್ತರ ಹತ್ತು ಅಡಿ ದಪ್ಪದ ಬಲಿಷ್ಠವಾದ ರಕ್ಷಣಾ ಗೋಡೆ,ಅದರ ಮೇಲ್ಭಾಗದಲ್ಲಿರೋ ನಲವತ್ತಕ್ಕೂ ಅಧಿಕ ರಕ್ಷಣಾ ಗೋಪುರಗಳು,ಮಾಧವ ಹಾಗೂ ರಂಗನಾಥ ದೇವಸ್ಥಾನಗಳು,ಮದ್ದುಗುಂಡು ಸಂಗ್ರಹಾಗಾರ,ಉಗ್ರಾಣಗಳು,ರಾಣಿ ಮಹಲ್,ಬಂಧೀಖಾನೆ,ಪುಷ್ಕರಣಿಗಳು,ಚಾರ್ ಮಿನಾರ್,ಜುಮ್ಲಾ ಮಸೀದಿ ಇಲ್ಲಿನ ಪ್ರಮುಖ ಆಕರ್ಷಣೆಯಾದರೆ,ಇವೆಲ್ಲವುಗಳನ್ನೂ ಮೀರಿಸುವಂತೆ ಜನರನ್ನು ಆಕರ್ಷಿಸುತ್ತಿರೋದು ಮಾತ್ರ ಕೋಟೆಗೆ ಕಾವಲುಗೋಡೆಯಂತೆ ಮೂರು ಭಾಗ ಆವರಿಸಿಕೊಂಡಿರುವ ಪೆನ್ನಾ ನದಿಯಿಂದಾಗಿ ಉಂಟಾಗಿರೋ ಮುನ್ನೂರು ಅಡಿ ಅಗಲ ಹಾಗೂ ಕಿಲೋಮೀಟರುಗಟ್ಟಲೆ ಉದ್ದಕ್ಕೆ ಮಲಗಿರೋ ಆನಕೊಂಡಾ ಹಾವಿನಂತಿರೋ ಕಣಿವೆಯ ವಿಹಂಗಮ ದೃಶ್ಯಾವಳಿಗಳು.
ಇತಿಹಾಸ :-
ಕ್ರಿಸ್ತಶಕ 1123 ರಲ್ಲಿ ಕಲ್ಯಾಣದ ಚಾಲುಕ್ಯರ ಸಾಮಂತ ರಾಜನಾಗಿದ್ದ ಕಾಕರಾಜ ಎಂಬಾತ ತನ್ನ ಪುಟ್ಟದೊಂದು ರಾಜ್ಯವೊಂದನ್ನು ಕಟ್ಟಿಕೊಂಡು ಸಣ್ಣದಾಗಿ ಕೋಟೆ ನಿರ್ಮಿಸಿದ್ದ.ನಂತರದಲ್ಲಿ ವಿಜಯನಗರದ ರಾಜರ ಸಾಮಂತರಲ್ಲಿ ಪ್ರಮುಖರಾಗಿದ್ದ ಪೆಮ್ಮಸಾನಿಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಮೇಲೆ ದೃಶ್ಯವೇ ಬದಲಾಗಿ ಹೋಯ್ತು.ಪೆಮ್ಮಸಾನಿ ವಂಶದಲ್ಲಿ ಪ್ರಮುಖನಾಗಿದ್ದ ಕುಮಾರ ತಿಮ್ಮಾನಾಯಕನ ಆಳ್ವಿಕೆಯ ಕಾಲದಲ್ಲಂತೂ ಉತ್ತುಂಗದಲ್ಲಿತ್ತು.ಈತನ ನಂತರದಲ್ಲಿ ಬಂದಂತಹ ರಾಮಲಿಂಗ ನೃಪಾಲುಡು,ಪೆದ್ದ ತಿಮ್ಮಾನಾಯಕ,ಅರ ತಿಮ್ಮಾನಾಯಕರಾದಿಯಾಗಿ ಇನ್ನಿತರ ರಾಜರುಗಳೂ ನಾಡನ್ನು ಕಟ್ಟಿ ಬೆಳೆಸುವಲ್ಲಿ ಶ್ರಮವಹಿಸಿದ್ದಾರೆ.
ಹೀಗೆ ಸಮೃದ್ಧವಾಗಿದ್ದ ನಾಡೊಂದು ಮೀರ್ ಜುಮ್ಲಾ ಎಂಬಾತನ ಆಕ್ರಮಣದ ನಂತರದಲ್ಲಿ ಚಿತ್ರಣವೇ ಬದಲಾಗಿ ಹಾಳು ಹಂಪಿಯಂತಾಗಿದ್ದು ಮಾತ್ರ ವಿಪರ್ಯಾಸ.
ತನ್ನ ತೆಕ್ಕೆಗೆ ತೆಗೆದುಕೊಂಡ ಮೀರ್ ಜುಮ್ಲಾ ಮಸೀದಿ,ಚಾರ್ ಮಿನಾರ್ ಇತ್ಯಾದಿಗಳನ್ನು ನಿರ್ಮಿಸಿದ್ದಲ್ಲದೆ,ಇಲ್ಲಿದ್ದ ದೇವಾಲಯಗಳ ವಿಗ್ರಹಗಳನ್ನೆಲ್ಲಾ ನದಿಗೆಸೆದು,ಶಿಲ್ಪಕಲೆಗಳನ್ನೆಲ್ಲಾ ಧ್ವಂಸ ಮಾಡಿ, ಮೂಲನಿವಾಸಿಗಳನ್ನು ಇನ್ನಿಲ್ಲದಂತೆ ಚಿತ್ರಹಿಂಸೆಗೊಳಪಡಿಸಿ ತನ್ನ ವಿಕೃತಿಯನ್ನು ಮೆರೆಯಲಾರಂಭಿಸಿದ.
ಈಗ ಅಲ್ಲಿರೋ ರಂಗನಾಥ,ಮಾಧವರಾಯ ದೇವಸ್ಥಾನಗಳೆರಡರಲ್ಲೂ ಇಂದಿಗೂ ಪೂಜೆ ನಡೆಯೋದಿಲ್ಲ ಕಾರಣ ಅಲ್ಲಿ ಪೂಜಿಸಲು ವಿಗ್ರಹವೇ ಇಲ್ಲ.
ಮುಗಿಲೆತ್ತರಕ್ಕೆ ಚಾಚಿದಂತಿರೋ ಬಂಡೆಗಳ ತುದಿಯನ್ನೇರಿ ಕುಳಿತು ಸೂರ್ಯೋದಯ ಹಾಗೂ ಸೂರ್ಯಾಸ್ತಗಳೆರಡರ ದೃಶ್ಯ ವೈಭವವನ್ನು ಸವಿಯಬಹುದಾಗಿದ್ದು,ಚಾರಣ ಮಾಡ ಬಯಸುವವರು ಎರಡು ಕಿಮೀ ಆಳದಲ್ಲಿರೋ ನದಿ ಪಾತ್ರದ ವರೆಗೊಂದು ಚಾರಣವೂ ಕೈಗೊಳ್ಳಬಹುದಾಗಿದೆ.ಇದಿಷ್ಟೇ ಅಲ್ಲದೆ ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ರಾಕ್ ಕ್ಲೈಂಬಿಂಗ್,ರ್ಯಾಪಲ್ಲಿಂಗ್,ಕಯಾಕಿಂಗ್,ಬೋಟಿಂಗ್ ಸೌಲಭ್ಯವೂ ಇದ್ದು,ಇತ್ತೀಚೆಗೆ ಜಲಾಶಯದ ನಡುವಲ್ಲಿರೋ ದ್ವೀಪದಲ್ಲಿಯೂ ರೆಸಾರ್ಟ್ ನಿರ್ಮಾಣವಾಗಿದ್ದು ಅಲ್ಲಿಗೂ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪೆನ್ನಾ ನದಿಯ ಮತ್ತೊಂದು ವಿಶೇಷವೆಂದರೆ,
ಈ ನದಿಯ ಉಗಮಸ್ಥಾನವಿರೋದು ನಮ್ಮ ಕರ್ನಾಟಕದ ಚಿಕ್ಕಬಳ್ಳಾಪುರದ ಬಳಿಯ ನಂದಿ ಬೆಟ್ಟದಲ್ಲಿ.
ಬೇಲಂ ಗುಹೆಗಳು.(Belam,Belum Caves )
ದೇಶದಲ್ಲಿಯೇ ಅತ್ಯಂತ ಉದ್ದ ಹಾಗೂ ದೊಡ್ಡದಾದ ನೈಸರ್ಗಿಕ ಗುಹೆಯೆಂಬ ಖ್ಯಾತಿಯ,ಮಿಲಿಯನ್ ವರ್ಷಗಳ ಹಿಂದೆ ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ರಚನೆಗೊಂಡಿರೋ ಬೇಲಂ ಗುಹೆ ಜಮ್ಮಲಮಡುಗುವಿನಿಂದ ಕೇವಲ 46 km ದೂರದಲ್ಲಿದೆ.ಸುಣ್ಣದ ಕಲ್ಲುಗಳಿಂದ ನಿರ್ಮಾಣವಾಗಿರೋ ಈ ಗುಹೆ ಭೂಮಟ್ಟದಿಂದ ನೂರೈವತ್ತು ಅಡಿ ಆಳದಲ್ಲಿದ್ದು,ಇಲ್ಲಿಯವರೆಗೂ 3.5 ಕಿಮೀ ವರೆಗೂ ಅನ್ವೇಷಿಸಲಾಗಿದ್ದು ಇದರಲ್ಲಿ ಕೇವಲ 1.5 ಕಿಮೀ ನಷ್ಟು ಮಾತ್ರ ಸಾರ್ವಜನಿಕ ವೀಕ್ಷಣೆಗೆ ತೆರೆದಿಡಲಾಗಿದೆ.
ಸಾಗುತ್ತಾ ಹೋದಂತೆ ಹೊಸದೊಂದು ಜಗತ್ತಿನೊಳಗೆ ಪ್ರವೇಶಿಸುವಂತೆ ಭಾಸವಾಗುವ,ಸುತ್ತಲೂ ಕಂಡುಬರೋ ಚಿತ್ರವಿಚಿತ್ರ ರಚನೆಗಳು,ಕೆಲವೊಂದು ಕಡೆ ನೇರವಾಗಿ ನಡೆಯಲೂ ಆಗದಂತಹ ಕೊಳವೆ ಮಾರ್ಗಗಳ ಹಾದಿಯನ್ನು ಮತ್ತಷ್ಟು ರೋಚಕಗೊಳಿಸುತ್ತವೆ.ಹೀಗಿದ್ದೂ ಸಾಕಷ್ಟು ಬೆಳಕಿನ ಹಾಗೂ ಇಂಗಾಲ ಹೀರಿಕೊಳ್ಳುವ ಕೊಳವೆಗಳನ್ನು ಅಳವಡಿಸಲಾಗಿರೋ ಕಾರಣದಿಂದಾಗಿ ಸಮಸ್ಯೆಯೇನೂ ಉಂಟಾಗುವುದಿಲ್ಲ.
ಸಾಗುವ ಹಾದಿಯಲ್ಲಿ ವೀಕ್ಷಣೆಗೆ ಅನುಕೂಲವಾಗುವಂತೆ ಒಂಬತ್ತು ವಿಭಾಗಗಳಾಗಿ ವಿಂಗಡಿಸಲಾಗಿದ್ದು ಅತೀ ಚಿಕ್ಕ ಹಾದಿಯಲ್ಲಿ ಅಗೋ ಸಿಂಹದ್ವಾರ,ಛಲಪತಿ ರೆಡ್ಡಿ ಹಾಲ್,ಗಧೆ,ಆನೆಯ ಕಾಲುಗಳ ರಚನೆಯಂತಿರೋ ರಾಮರೆಡ್ಡಿ ಮಂಟಪ,ಶಿಲಿಂಗಗಳನ್ನು ತಲೆ ಕೆಳಗಾಗಿ ಇಳಿ ಬಿಟ್ಟಂತಿರುವ ರಚನೆಗಳಿರೋ ಕೋಟಿಲಿಂಗ,ಆಲದ ಮರದಂತೆಯೇ ರಚನೆಯಿರೋದ್ರಿಂದಾಗಿ ಆಲದಮರದ ಹಾಲ್,ತರವೇಹಾರಿ ಬೆಳಕುಗಳ ವೈವಿದ್ಯಮಯ ಮಾಯಾ ಮಂದಿರ,ಶಿವಲಿಂಗ ಮೇಲೆ ನೀರು ಬೀಳುತ್ತಿರುವ ಗುಹೆಗಳಲ್ಲಿಯೇ ಅತೀ ಆಳದಲ್ಲಿರೋ ಪಾತಾಳ ಗಂಗೆ,ಧ್ಯಾನ ಮಂದಿರ,ಗೆಬರ್ ಹಾಲ್ ಎಂಬ ಹೆಸರು ನೀಡಲಾಗಿದೆ.
ಉಳಿದುಕೊಳ್ಳಲು.....
ಟೆಂಟ್ ಗಳನ್ನು ಕೊಂಡೊಯ್ದಲ್ಲಿ ಎಲ್ಲಿಯೂ ಹಾಕಿಕೊಳ್ಳುವ ಅವಕಾಶವಿದ್ದು,ಕೋಟೆಯ ಬಳಿಯಲ್ಲಿಯೇ ಪ್ರವಾಸೋದ್ಯಮ ಇಲಾಖೆಯ ಏಕೈಕ ರೆಸಾರ್ಟ್ ಲಭ್ಯವಿದ್ದು ಸಕಲ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ.ಅಲ್ಲಿಯೂ ಟೆಂಟ್ ಸೌಲಭ್ಯವೂ ಇದೆ.
ಇತ್ತೀಚೆಗೆ ದ್ವೀಪದೊಳಗೂ ಹೊಸದಾಗಿ ಹೋಟೆಲ್ ನಿರ್ಮಾಣವಾಗಿರೋದ್ರಿಂದಾಗಿ ಅಲ್ಲಿಯೂ ಉಳಿದುಕೊಳ್ಳಬಹುದಾಗಿದೆ.
ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳು.
ತಾಡಪತ್ರಿಯ ಇತಿಹಾಸ ಪ್ರಸಿದ್ಧ ಚಿಂತಲ ವೆಂಕಟರಮಣ ಹಾಗೂ ರಾಮ ಲಿಂಗೇಶ್ವರ ದೇವಸ್ಥಾನಗಳು,ಯಗಾಂತಿ ಗುಹಾಂತರ ದೇವಸ್ಥಾನಗಳು,ಮೈಲಾವರಂ ಜಲಾಶಯ.
ಸಮೀಪದ ವಿಮಾನ ನಿಲ್ದಾಣ :- ಬೆಂಗಳೂರು 270ಕಿಮೀ ದೂರದಲ್ಲಿದೆ.
ರೈಲ್ವೇ ನಿಲ್ದಾಣ :- ಕಡಪ ಜಿಲ್ಲೆಯ ಮುದ್ದನೂರು 26ಕಿಮೀ ದೂರದಲ್ಲಿದೆ.
ಸಮೀಪದ ಬಸ್ ನಿಲ್ದಾಣ :- ಜಮ್ಮಲಮಡುಗು ಹದಿನೈದು ಕಿಮೀ ದೂರದಲ್ಲಿದ್ದು ಎಲ್ಲಾ ಊರುಗಳಿಂದಲೂ ಬಸ್ ಸೌಲಭ್ಯವಿದೆ.
#GandikotaFort #NH7 #BelumCaves #BelamCaves
Jammalamadugu kadapa district.
##MylavaramDam #MylavaraWaterReservoir
#LongdriveBangaloreToGandikota.