"ಕಾಶ್ಮೀರ ಕಣಿವೆಯಲ್ಲೊಂದು ಕರಾಳ ರಾತ್ರಿ"
(ಭಾಗ ಒಂದು)
ಸಂಜೆ ಐದೂವರೆಯಾಗಿತ್ತು,
ಎಲ್ಲವೂ ದೊಡ್ ಝೈಲೋ,ಟವೇರಾ ಸುಮೋ ತರಹದ ವಾಹನಗಳೇ.
ಕನಿಷ್ಟ ಹತ್ತು ಜನರಾದರೂ ಆಗದೆ ಗಾಡಿ ಸ್ಟಾರ್ಟ್ ಮಾಡೋ ಜಾಯಮಾನವೇ ಅವರದ್ದಲ್ಲ,ಅವತ್ಯಾಕೋ ಜನರೇ ಇರ್ಲಿಲ್ಲ. ಹೊರಡಬೇಕಿದ್ದ ಎರಡು ಗಾಡಿಗಳಲ್ಲೂ ಬರೀ ಮೂರ್ನಾಲ್ಕು ಜನರಷ್ಟೇ ಕುಳಿತಿದ್ದಾರೆ....
ಅದು ಜಮ್ಮುವಿನ ಹೃದಯ ಭಾಗದಲ್ಲಿರೋ ಶಾಲೀಮಾರ್ ರಸ್ತೆಯ ಟ್ಯಾಕ್ಸೀ ನಿಲ್ದಾಣ.ಜಮ್ಮುವಿನಿಂದ ಶ್ರೀನಗರಕ್ಕೆ ಹೋಗಬೇಕಿದ್ದಲ್ಲಿ ಇರೋದೇ ಎರಡು ಆಯ್ಕೆಗಳು ಒಂದೋ ಹತ್ತರಿಂದ ಹನ್ನೆರಡು ಗಂಟೆಗಳ ಪ್ರಯಾಸದಾಯಕ ಬಸ್ ಪ್ರಯಾಣ ಅಥವಾ ಆರರಿಂದ ಎಂಟು ಗಂಟೆಗಳ ಆರಾಮದಾಯಕವಲ್ಲದಿದ್ದರೂ ಕಡಿಮೆ ಪ್ರಯಾಸದ ಟ್ಯಾಕ್ಸಿ ಪ್ರಯಾಣ.
ಬಸ್ಸು ಹಗಲಲ್ಲಷ್ಟೇ ಸೂಕ್ತ, ರಾತ್ರಿ ಮಹಾ ಭಯಾನಕ.ಕಡಿದಾದ ಕಣಿವೆಯ ರಸ್ತೆಯಲ್ಲಿ ಹಗಲು ಸಾಗೋದೇ ಸಾವಿನೊಂದಿಗೆ ಸರಸ ಇನ್ನು ರಾತ್ರಿಯೆಂದರೆ ಕೇಳಬೇಕಾ?
ಟ್ಯಾಕ್ಸಿ ಹಿಡಿಯೋಣವೆಂದರೆ ಅದೂ ಹೊರಡೋಕೆ ಜನರಿಲ್ಲದೆ ಪರದಾಡುತ್ತಿತ್ತು...
ಆಗ ಸಿಕ್ಕವ್ನೇ ಅರ್ಜಿತ್ ಮಾನ್,
ಈತ ಜಲಂಧರ್ ಮೂಲದ ಸಧ್ಯ ಜಮ್ಮುವಿನಲ್ಲಿ ನೆಲೆಸಿರೋ ಟ್ಯಾಕ್ಸಿ ಡ್ರೈವರ್.
ವಿಚಾರಿಸುತ್ತಿದ್ದುದನ್ನು ನೋಡಿರಬೇಕು ಬಳಿ ಬಂದವನೆ ಪಾಜೀ ಗಾಡಿ ರೆಡೀ ಇದೆ
ಎರಡು ಜನ ಸಿಕ್ಕಿದಾರೆ ನೀವೂ ಬಂದ್ರೆ ಹೊರಟು ಬಿಡೋಣ ನಾಲ್ಕು ಜನ ಆಗ್ತೀರೀ ಸರಿಯಾಗುತ್ತೆ ಅಂದ.
ಅದು ಹೊಸಾ ಕಾರು ರಿಜಿಸ್ಟ್ರೇಷನ್ನೂ ಆಗಿಲ್ಲ ಜಮುವಿನಲ್ಲಿ ಖರೀದಿಸಿದ್ದಾನೆ ಶ್ರೀನಗರದ ವ್ಯಕ್ತಿಯೊಬ್ಬ,ಜಮ್ಮುವಿನಿಂದ ಅಲ್ಲಿಗ್ ತಗೊಂಡೋಗಿ ತಲುಪಿಸೋ ಕಾರ್ಯವನ್ನು ಟ್ರಾವೆಲ್ ಏಜನ್ಸಿಗೆ ವಹಿಸಿದ್ದಾರೆ,ಆತ ಖಾಲಿ ಗಾಡಿ ಕೊಂಡೊಯ್ಯೋ ಬದಲು ಗ್ಯಾಪಲ್ಲೇ ನಾಲ್ಕು ಸೀಟಾಕಿದ್ರೆ ಕಾಸಾಗುತ್ತೆ ಅಂತ ಡ್ರೈವರ್ ಸೆಟ್ ಮಾಡಿದ್ದಾನೆ ಆತ ನಮ್ಮನ್ನು ಹಿಡಿದವ್ನೆ....
ಜೊತೆಗಿದ್ದ ಇಬ್ಬರು ಸಹ ಪ್ರಯಾಣಿಕರೂ ಶ್ರೀನಗರದವರು.ಅದರಲ್ಲೊಬ್ಬ ಮೌಲಾನಾ ಅನ್ವರ್ ಖಾದ್ರೀ,ಈತನೂ ಮೂಲತಃ ಡ್ರೈವರ್ ಈಗ ಟಿಂಬರ್ ಕಂಟ್ರಾಕ್ಟ್ ಮಾಡ್ತಿದ್ದಾನೆ.ಇನ್ನೊಬ್ಬ ಇನಾಯತ್ ಭಟ್ ಇವರಿಬ್ಬರೂ ಪಾರ್ಟನರ್ಸ್.
ಅಂತೂ ಹೊರಟಿದ್ದಾಯ್ತು ಶ್ರೀನಗರದತ್ತ.
ಸ್ವಲ್ಪ ಹೊತ್ತಿನ ನೀರವ ಮೌನ ತೊಡೆದು ಮಾತುಕಥೆಯ ಬುತ್ತಿ ಬಿಚ್ಚಿ ತಿನ್ನಲು ಮೊದಲಾಗುತ್ತಿದ್ದಂತೆಯೇ ಪ್ರಾಥಮಿಕ ಉಭಯ ಕುಶಲೋಪರಿಯ ನಂತರ ಚರ್ಚೆ ಸಾಗಿದ್ದು ಪ್ರಸ್ತುತ ಕಾಶ್ಮೀರ ಕಣಿವೆಯ ಸ್ಥಿತಿಗತಿಗಳ ಬಗ್ಗೆ.
ಹೇಳೋದ್ ಮರೆತಿದ್ದೆ,ಇವರಿಬ್ಬರೂ ಪಕ್ಕಾ ಪ್ರತ್ಯೇಕತಾವಾದಿಗಳು,ಎಲ್ಲಾ ಕಾಶ್ಮೀರೀ ಮುಸ್ಲಿಮರಂತೆಯೇ ಇವರೂ ಭಾರತ ಕಾಶ್ಮೀರವನ್ನು ಅತಿಕ್ರಮಿಸಿಕೊಂಡು ಅನ್ಯಾಯ ಮಾಡ್ತಿದೆ ಎಂದು ನಂಬಿದವರು,ಭಾರತೀಯ ಸೇನೆ ನಮ್ಮ ಜೀವನವನ್ನೇ ಸರ್ವನಾಶ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಭಾವಿಸಿ ಬದುಕುತ್ತಿರುವವರು.
ಒಂದೊಂದಾಗಿ ಸೇನೆಯ ಹಾಗೆಯೇ ಭಾರತ ಸರ್ಕಾರದ ಲೋಪದೋಷಗಳನ್ನೂ ವಿವರಿಸುತ್ತಾ,ಹೇಗೆಲ್ಲಾ ಪಾಕಿ ಸೇನೆಯ ಜೊತೆಗಿನ ಸುಳ್ಳು ಎನ್ ಕೌಂಟರ್ ಗಳನ್ನು ಹೆಣೆದು ಕಥೆ ಕಟ್ಟಲಾಗುತ್ತಿದೆ ಎಂಬುದರಿಂದ ಶುರುವಾಗಿ ಬುಹ್ರಾನ್ ವಾನಿ ಯೆಂಬ ಅಮಾಯಕ? ದೇಶಭಕ್ತನೊಬ್ಬನನ್ನು ಹೇಗೆಲ್ಲಾ ಭಯೋತ್ಪಾದಕನ ಪಟ್ಟದಲ್ಲಿ ಕೂರಿಸಲಾಯ್ತು ಎಂಬುದನ್ನೆಲ್ಲಾ ವಿವರವಾಗಿ ಹೇಳ್ತಾ ಹೋಗ್ತಿದ್ರೆ ಹೂಂ ಗುಟ್ಟುತ್ತಾ ಉಳಿತಿದ್ದೆ ನಾನು.
ಅದಕ್ಕೆ ಪೂರಕವೆಂಬಂತೆ ನಾನೂ ಆಗಾಗ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಾ ಉತ್ತರ ಪಡೆದುಕೊಳ್ಳುತ್ತಾ ಅವರ ಮನಸ್ಥಿತಿಯ ಅನಾವರಣವಾಗಿಸುತ್ತಾ ಸಾಗುತ್ತಿದ್ದರೆ,ತನಗಿವೆಲ್ಲಾ ಸಂಬಂಧವೇ ಇಲ್ಲವೆಂಂತೆ ಒಂದೇ ಗತಿಯಲ್ಲಿ ಸಾಗುತ್ತಿತ್ತು ಹಾದಿ.
ತಮಾಷೆ ಎಂದರೆ ಆ ಸರ್ದಾರ್ಜಿ ಅರ್ಜಿತ್ ಮಾನ್ ಕೂಡಾ ಪಂಜಾಬ್ ಸೇರಿದಂತೆ ನಾಲ್ಕೈದು ರಾಜ್ಯಗಳು ಭಾರತದಿಂದ ಬೇರೆಯಾಗಿ ಪ್ರತ್ಯೇಕ ದೇಶವಾಗಬೇಕೆಂದು ಪ್ರತಿಪಾದಿಸೋ ಖಲಿಸ್ತಾನ ಮೂವ್ ಮೆಂಟಿನ ಅಭಿಮಾನಿ...
ಹೀಗೆ ಸಂಪೂರ್ಣ ಭಾರತವಿರೋಧಿ ಶಕ್ತಿಗಳ ನಡುವೆ ಎರಡು ಮುಗ್ಧ ಅಮಾಯಕ ಜೀವಗಳು ಕುಳಿತು,ಅವರು ಹೇಳುತ್ತಿರೋದೆಲ್ಲಾ ಸತ್ಯವೆಂದೇ ನಂಬುವಂತೆ ಪ್ರತಿಪಾದಿಸುತ್ತಿರೋದನ್ನು ಆಲಿಸುತ್ತಿರೋದೂ ಅಲ್ಲದೆ ಇತ್ತೀಚಿನ ಘಟನಾವಳಿಗಳ ಬಗ್ಗೆ,ಕೆಲವೊಂದು ಕಾಯ್ದೆಗಳ ನಿಷೇಧಿಸುವ ಬಗ್ಗೆ,ಸೇನೆ ಹಾಗೂ ಪೊಲೀಸ್ ಇಲಾಖೆಗಳ ದೌರ್ಜನ್ಯದ ಬಗ್ಗೆ ಮಾತನಾಡುತ್ತಾ ಹಲವಾರು ಉದಾಹರಣೆಗಳನ್ನು ಪ್ರಸ್ತುತ ಪಡಿಸುತ್ತಾ,ನಲವತ್ತೇಳರಿಂದ ಶುರುವಾಗಿ ಇತ್ತೀಚಿನ ಉರಿ ಅಟ್ಯಾಕ್ ವರೆಗಿನ ವಿವರಗಳಿಗೆ ಬರೋ ಸಮಯಕ್ಕೆ ಸರಿಯಾಗಿ,ಉಧಮ್ ಪುರ್ ದಾಟಿ ಮುಂದೆ ಪೀರಾ ಎಂಬ ಹಳ್ಳಿಯ ಹಳ್ಳಿಯ ಧಾಬಾವೊಂದರಲ್ಲಿ ಊಟಕ್ಕೆ ನಿಲ್ಲಿಸಿದ್ವೀ ಕಾರು....
ಕ್ರಿಕೆಟ್ ಮ್ಯಾಚ್ ನೆಡೆಯುತ್ತಿತ್ತು.
ಬಂದಿರೋ ಗಿರಾಕಿಗಳಿಗೆ ಏನ್ ಬೇಕು ಅಂತ ಕೇಳೋವ್ರೇ ಗತಿಯಿಲ್ಲ ಅಲ್ಲಿ,ಇಡೀ ಡಾಭಾವೇ ಭಾರತದ ಗೆಲುವಿಗಾಗಿ ಉಸಿರು ಬಿಗಿ ಹಿಡಿದು ತಟಸ್ಥವಾಗಿ ಕುಳಿತುಬಿಟ್ಟಿದೆ,ಇನ್ನೇನು ನಾಲ್ಕೋ ಐದೋ ಓವರ್ ಇತ್ತಷ್ಟೇ.
ಅದು ಭಾರತ ಬಾಂಗ್ಲಾದೇಶ ನಡುವಿನ ಫೈನಲ್ ಕದನ.
ಸಂಪೂರ್ಣ ಸೋಲಿನತ್ತ ಪಾದವೂರಿದ್ದ ಭಾರತ ಕಾರ್ತಿಕ್ ಕಮಾಲಿನಿಂದಾಗಿ ಜಯದತ್ತ ಮಗ್ಗುಲು ಬದಲಿಸುತ್ತಿದ್ರೆ ಇತ್ತ ಆ ಕಾಶ್ಮೀರೀಗಳ ಮೊಗವ್ಯಾಕೋ ಹುಳಿ ತಿಂದ ಮಗುವೊಂದರ ಮುಖದಂತಾಗಲು ಮೊದಲಾಗಿತ್ತು.
ಬಾಂಗ್ಲಾ ಗೆಲುವಿಗೆ ಬೆಟ್ಟಿಂಗಿನಲ್ಲಿ ಹಣ ಹೂಡಿರುವುದೇ ನಮ್ಮೀ ನರಳಾಟಕ್ಕೆ ಕಾರಣವಷ್ಟೇ ಹೊರತು ಮತ್ತೇನಿಲ್ಲ ಎಂದು ಸಮರ್ಥನೆ ನೀಡಲು ಯತ್ನಿಸಿದರಾದ್ರೂ ಅದು ನಿಜವಲ್ಲ ಎಂಬುದು ಅವರಿಗೂ ಗೊತ್ತಿತ್ತು ನಮಗೂ ಅರಿವಾಗಿ ಬಹಳಕಾಲವಾಗಿತ್ತು.
ಭಾರತಕ್ಕೆ ರೋಚಕ ಜಯ.
ಡಾಭಾ ಮಾಲಿಕ ಎಲ್ಲರಿಗೂ ರಸಗುಲ್ಲ ಹಂಚುವ ಮೂಲಕ ಸಂಭ್ರಮಾಚರಣೆಗೊಂದು ತೆರೆ ಎಳೆಯುವುದರೊಂದಿಗೆ ನಮ್ಮ ಪಯಣ ಮತ್ತೆ ಶುರುವಾಯ್ತ....
ಅಂದುಕೊಂಡಂತೇ ಆದಲ್ಲಿ ಇನ್ನೊಂದು ಗಂಟೆಯಲ್ಲಿ ಶ್ರೀನಗರ.
ಸಮಯ ಮಧ್ಯರಾತ್ರಿ ಹನ್ನೆರಡಿರಬಹುದು,
ಆಗ ಬಂತು ನೋಡಿ
ರಾಮಬನ್ ಜಿಲ್ಲಾ ಸರಹದ್ದಿನಲ್ಲಿರೋ ಪೊಲೀಸ್ ಚೆಕ್ ಪೋಸ್ಟ್.....
(ಮುಂದುವರಿಯುವುದು)

No comments:
Post a Comment