"ಕಾಶ್ಮೀರ ಕಣಿವೆಯಲ್ಲೊಂದು ಕರಾಳ ರಾತ್ರಿ"
(ಭಾಗ ಮೂರು)
ಆ ಸ್ಟೇಷನ್ ಇರೋ ಜಾಗವಾದ್ರೂ ಎಂತದ್ದು ಅಂತೀರೀ....
ಭರೋ ಹಂತ ಹರಿಯುತ್ತಿರೋ ಚೆನಾಬ್ ನದಿ,
ಆ ನದಿಯನ್ನು ಬಳಸಿಕೊಂಡು ಸದ್ದಿಲ್ಲದೆ ಮಲಗಿರೋ ಪ್ರಪಾತಕ್ಕೊಂದು ಕೈ ತಾಗಿಸಿದಂತೆಯೇ ಪವಡಿಸಿರೋ ಹೆಬ್ಬಾವಿನಂತಹ ರಸ್ತೆಯಲ್ಲಿ ಕಿಲೋಮೀಟರುಗಟ್ಟಲೆ ಸಾಗಿ ಮೇಲೇರಿ ಬಂದರೆ ಸಿಗೋ ಪರ್ವತವೊಂದರ ತುದಿಯಲ್ಲೊಂದು ಹತ್ತಡಿಯ ಭದ್ರ ಕೋಟೆಯಂತಹ ಕಾಂಪೋಂಡು.
ಅದಕ್ಕೊಂದು ಬ್ರಿಟಿಷರ ಕಾಲದ ಗೇಟು,
ಅದರೊಳಗೆ ಪ್ರವೇಶಿಸಿದರೆ ಒಂದು ಪಾರ್ಕಿಂಗಿನಂತಹ ಜಾಗ,
ಅದನ್ನು ದಾಟಿ ನಡೆದರೆ ಮತ್ತೊದು ಸಣ್ಣ ಆರಡಿಯ ಕಾಂಪೋಂಡು,
ಅಲ್ಲಿಂದ ಒಳಹೋದರೆ ಸಿಗೋದೇ ರಾಜರ ಕಾಲದ ದೊಡ್ಡ ಬಂಗಲೆ,
ಆ ಭೂತ ಬಂಗಲೆಯೇ ಪೊಲೀಸ್ ಸ್ಟೇಷನ್....
ಇದ್ದ ಬದ್ದ ವಸ್ತುಗಳನ್ನೆಲ್ಲಾ ಕಸಿದುಕೊಂಡದ್ದಾಗಿದೆ,
ಪುಣ್ಯಕ್ಕೆ ಬಟ್ಟೆಯೊಂದನ್ನು ಕಿತ್ತುಕೊಳ್ಳದೆ ಕರುಣೆ ತೋರಿದ್ದಾರೆ.ನಮ್ಮದೋ ಐಸಿಯು ವಾರ್ಡೊಂದರ ಎದುರು ಕುಳಿತ ರೋಗಿಯ ಸಂಬಂಧಿಕರಂತಾಗಿದೆ ಪರಿಸ್ಥಿತಿ, ಮುಂದೇನೆಂಬುದೂ ಗೊತ್ತಿರದ,ಏನು ಮಾಡಲೂ ತೋಚದ,ಯಾರಲ್ಲಿಯೂ ಏನೂ ಹೇಳಲಾಗದ ಅಥವಾ ಪ್ರಶ್ನಿಸಲಾಗದ ಅಸಹಾಯಕ ಸ್ಥಿತಿ...
ಮೊದಲೇ ಪಾಕ್ ಪರ ಸಿದ್ದಾಂತದ,
ಭಾರತವೆಂದರೆ ಭಾರತೀಯ ಸೇನೆಯೆಂದರೆ ಉರಿದುಬೀಳೋ,ಶತಾಯ ಗತಾಯ ಕಾಶ್ಮೀರವನ್ನು ಭಾರತದಿಂದ ಕತ್ತರಿಸಿ ಬದಿಗಿರಿಸಿ ಸಂಭ್ರಮಾಚರಣೆ ಮಾಡಬೇಕೆಂಬ ಕನಸು ಕಾಣ್ತಿರೋ ಬಡ್ಡೀಮಕ್ಳು ಜೊತೆಗಿದ್ದಾರೆ.
ಅವರಷ್ಟೇ ಪಾಖಂಡಿಗಳು ಅಂದುಕೊಳ್ಳಬೇಡಿ,ಈ ಸರ್ದಾರ್ಜಿಯೇನು ಕಡಿಮೆಯೇ?
ಈತನೂ ಅಖಾಲ್ ತಕ್ತ್ ಹಾಗೂ ಖಲಿಸ್ತಾನದ ಪ್ರತ್ಯೇಕ ಪಂಜಾಬಿನ ಪ್ರತಿಪಾದಕ ಜೊತೆಗೇ ಉಗ್ರ ಬಿಂದ್ರಾನ್ ವಾಲೆಯ ಆರಾಧಕ ಇಷ್ಟು ಸಾಕಲ್ವಾ...
ಏನ್ ಮಾಡಿದ್ದಾರೋ ಏನ್ ಕಥ್ಯೋ?
ಅವ್ರೂ ಹೇಳ್ತಿಲ್ಲ ಪೊಲೀಸ್ರೂ ಬಾಯಿ ಬಿಡ್ತಿಲ್ಲ.
ಹೋಗಿ ಕೇಳೋಣವೆಂದರೆ ಅಗ್ನಿ ಐಪಿಎಸ್ ಮೂವೀ ಸಾಯಿಕುಮಾರ್ ತರ ಮುಖ ಗಂಟಾಕೊಂಡ್ ಕಣ್ ಕೆಂಪ್ಮಾಡ್ಕೊಂಡ್ ಕುಳಿತುಬಿಟ್ಟಿದ್ದಾರೆ.
ಏನೇ ಕೇಳಿದರೂ ಅವರದ್ದೊಂದೇ ಉತ್ತರ,ನಿಮ್ಮನ್ನಿಲ್ಲಿ ಕರೆತಂದ ಪೊಲೀಸರೂ ಅವರ ಆಫೀಸರ್ರೂ ಬರಬೇಕು ಅವರಷ್ಟೇ ತಿಳಿಸೋಕ್ ಸಾಧ್ಯ.ಇವಿಷ್ಟೇ ಅವ್ರು ಉದುರಿಸೋ ಗಿಣಿಪಾಠದ ಅಣಿಮುತ್ತುಗಳು.....
ಆಗ ಸಮಯ ಸರಿಸುಮಾರು ಮಧ್ಯರಾತ್ರಿಯ ಎರಡೂ ನಲವತ್ತಾಗಿತ್ತು.
ಕರ್ಕಶವಾಗಿ ಸೌಂಡ್ ಮಾಡುತ್ತಾ ಜೀಪೊಂದು ಒಳಬಂತು,
ಈ ಸಲ ಅದರಲ್ಲಿ ಇದ್ದದ್ದು ನಮ್ಮನ್ನು ಕರೆತಂದು ಬಿಟ್ಟುಹೋಗಿದ್ದ ಪೊಲೀಸು,ಆತ ಈಸಲ ಇನ್ನೆರಡು ಹುಡುಗರನ್ನು ಕರೆತಂದಿದ್ದ ಅವರೂ ಕಾಶ್ಮೀರಿಗಳೇ,ಬಾರಾಮುಲ ಮೂಲದವರಂತೆ ಹದಿನೆಂಟೋ ಹತ್ತೊಂಬತ್ತೋ ವಯಸ್ಸು.ಪಕ್ಕದ ಬನಿಹಾಲ್ ಸಮೀಪದ ಲಾಡ್ಜೊಂದರಲ್ಲಿದ್ದವರನ್ನು ಕರ್ಕೊಂಡ್ ಬಂದಿದ್ದಾನೆ ತನಿಖೆಗಾಗಿ.
ಬಂದವನೇ ಇಬ್ಬರನ್ನೂ ಅಂಡರ್ ವೇರೊಂದನ್ನು ಬಿಟ್ಟು ಎಲ್ಲವನ್ನೂ ಕಳಚುವಂತೆ ಆದೇಶಿಸಿ ತನಿಖೆ ಮೊದಲಿಟ್ಟುಕೊಂಡುಬಿಟ್ಟ.ಮಾತಾಡ್ತಿದ್ದದ್ದು ಕಾಶ್ಮೀರಿಯಲ್ಲಾದ್ದರಿಂದ ಒಂದೂ ತಿಳಿಯುತ್ತಿತಿಲ್ಲವಾದರೂ,
ಮಾತಿಗೊಮ್ಮೆ ಬಾರಿಸುತ್ತಿರೋದೂ ಅವ್ರಿಬ್ರೂ ಕುಯ್ಯೋ ಮರ್ರೋ ಅಂತ ಕಿರುಚುತ್ತಿರೋದಂತೂ ನಮ್ ಅರಿವಿಗೆ ಬರುತ್ತಿತ್ತು.
ಸುಸ್ತಾಗಿರಬೇಕೇನೋ ಪಾಪಾ ಆ ಪೊಲೀಸಪ್ಪನಿಗೆ,
ಉಸಿರು ಬಿಡುತ್ತಾ ಹೊರಬಂದವನೇ ಯಾರಿಗೋ ಕರೆಮಾಡಿ ಏನೋ ತಿಳಿಸುತ್ತಾ ಹೊರಟೇಬಿಟ್ಟ,
ಮತ್ತೊಮ್ಮೆ ನಿರೀಕ್ಷೆಯ ಬಲೂನು ಪುಸ್ ಎಂದಿತ್ತು.....
ಬೆಳಗಿನ ಜಾವ ನಾಲ್ಕು ಗಂಟೆ,
ನೀರವ ಮೌನವೇ ಉಂಬಿಕೊಂಡಂತಾಗಿ ನಿಶ್ಯಬ್ಧವಾಗಿದ್ದ ಸ್ಟೇಷನ್ನು ಮೈ ಕೊಡವಿಕೊಳ್ಳುವಂತೆ ಕರ್ಕಶ ಶಬ್ಧ ಮಾಡುತ್ತಾ ಮೂರ್ನಾಲ್ಕು ಜೀಪುಗಳು ಜೊತೆಗೊಂದು ಕಾರು ಅದರೊಳಗೆ ನಾವು ಕಾಯ್ತಿದ್ದ ಆಫೀಸರ್ರು ಆಗಮಿಸಿದ್ದ,ಆತನೂ ಜೊತೆಗೊಂದು ನಾಲ್ಕು ಜನರನ್ನು ಕರೆತಂದಿದ್ದ.ಎಲ್ಲಾ ಸ್ಥಳೀಯ ಜನರೇ ಅನ್ಸುತ್ತೆ ಯಾಕೆಂದರೆ ಎಲ್ಲರೂ "ಫೆರಾನ್" (ಕಾಶ್ಮೀರೀ ಟ್ರೆಡಿಶನಲ್ ಓವರ್ ಕೋಟು) ತೊಟ್ಟಿದ್ರು....
ಬಂದವನೇ ಒಮ್ಮೆ ನಮ್ಮನ್ನು ನೋಡಿದವನು,
ಅಲ್ಲಿದ್ದ ಸೆಂಟ್ರೀ ಬಳಿ ಏನೋ ಮಾತನಾಡಿ,ಅವರು ನಮ್ಮ ಬಗ್ಗೆ ಬರೆದಿಟ್ಟಿದ್ದ ವರದಿಯಿರಬೇಕು ಅದನ್ನು ಓದಿಕಳ್ಳುತ್ತೇ ಸೀದಾ ಒಳಗೆ ಹೋದದ್ದಷ್ಟೇ....ಆಗ ಶುರುವಾಯ್ತು ನೋಡಿ ಒಂದೇ ಸಮನೆ ಕಿರುಚಾಟಗಳು ಅರಚಾಟಗಳು ಬಡಿಯುತ್ತಿರೋ ಸದ್ದುಗಳು ಅಲ್ಲಿ ಬಾರಿಸುತ್ತಿದ್ರೆ ಇಲ್ಲಿ ಮೈ ಝುಮ್ ಅನ್ನೋಕ್ ಶುರುವಾಗಿತ್ತು.
ಅದಕ್ಕಿಂತಾ ಟಾರ್ಚರ್ ಅಂದ್ರೆ ನಮ್ ಮೌಲಾನಂದು.
ಈ ಯಪ್ಪ ಸುಮ್ನೆ ಕೂರದೆ,ಹೇಳಿಲ್ವಾ ನಾನು ನೀವೇ ನೋಡ್ತಿದೀರಲ್ಲ ಪೊಲೀಸರ ದೌರ್ಜನ್ಯ ಅತ್ಯಾಚಾರಗಳನ್ನು,ಇದೇನೂ ಅಲ್ಲ ಸೇನೆಯವರ ಹಿಂಸಾಚಾರದ ಮುಂದೆ,ನರಕ ಸೃಷ್ಟಿಸಿದ್ದಾರೆ ನಮ್ಮ ಕಾಶ್ಮೀರವೆಂಬ ಸ್ವರ್ಗದಲ್ಲಿ,ಪ್ರತ್ಯೇಕ ಆಗೋದೊಂದೇ ದಾರಿ,ಇನ್ನಾದರೂ ನಮ್ಮ ನಾಡನ್ನು ನಮಗೊಪ್ಪಿಸಿ ತೆಪ್ಪಗಿರಬೇಕು ಸೇನೆ ಹಾಗೂ ಭಾರತ ಸರ್ಕಾರ ಅಂತ ಜುಮ್ಮಾಕೀ ಬಯಾನ್ ಶುರು ಹಚ್ಕೊಂಡ್ ಬಿಟ್ಟಿದ್ದಾನೆ ಈ ಸರಿಹೊತ್ತಲ್ಲೂ....
ಅಂತೂ ಹೊರ ಬಂದ ಆಫೀಸರ್ರು,
ಆಗ ಐದು ಗಂಟೆ ಹತ್ತು ನಿಮಿಷ ತೋರಿಸ್ತಿತ್ತು ಗಡಿಯಾರ,ಏನಾದ್ರೂ ಮಾತನಾಡಿ ಬಗೆಹರಿಸಿಕೊಳ್ಳೋಣ ಅಂತೆನ್ನಿಸಿ ಎದ್ದು ನಿಲ್ಲೋ ಮೊದಲೇ ಅಲ್ಲಿದ್ದ ಸೆಂಟ್ರಿಗೇನೋ ಹೇಳಿ ಹೊರಟೇ ಬಿಟ್ಟಿದ್ದ ಆಸಾಮಿ ಕಾರನ್ನೇರಿ.ಅಯ್ಯೋ ದೇವ್ರೇ,
ರಾತ್ರಿ ಹೋಗಿ ಹಗಲೂ ಇಲ್ಲೇ ನಮ್ ಕ್ಯಾಂಪ್ ಆಗೋ ಹಾಗ್ ಕಾಣ್ತಿದ್ಯಲ್ಲ ಅಂದ್ಕೊಳೋ ಟೈಮಿಗ್ ಸರ್ಯಾಗಿ ಸೆಂಟ್ರೀ ಬಂದವನೇ,
ಎಲ್ಲಾ ಕ್ಲಿಯರ್ ಆಗಿದೆ
ನಿಮ್ ನಂಬರ್ರೂ ಪರ್ಮನೆಂಟ್ ಅಡ್ರೆಸ್ಸೂ ನೀಡಿ ಹೊರಡಬಹುದು ಅಂತಂದ,
ಆಗ ಬಂತೂ ನೋಡಿ
ಗಂಟೆಗಳಿಂದ ಎದೆಯೊಳಗೆ ಅದುಮಿ ಕುಳಿತಿದ್ದ ಉಸಿರು ಆಚೆಗೆ.
ಉಸ್ಸಪ್ಪಾ.....
ಅಂತೂ ಇಂತೂ ಎಲ್ಲಾ ಫಾರ್ಮಾಲಿಟೀಸ್ ಮುಗಿಸಿ ಹೊರ ಬಂದಾಗ ಸರಿಯಾಗಿ ಬೆಳಗಿನ ಆರುಗಂಟೆ ಮೂವತ್ತೈದು ನಿಮಿಷ.
ವಿಷ್ಯ ಏನಂದ್ರೆ,
ಅವತ್ತು ರಾತ್ರಿ ನಾವು ರಾಮ್ ಬನ್ ಚೆಕ್ ಪೋಸ್ಟ್ ರೀಚಾಗೋ ಕೆಲ ಸಮಯದ ಹಿಂದಷ್ಟೇ ವ್ಯಕ್ತಿಯೊಬ್ಬನ ಹತ್ಯೆಯಾಗಿದೆ ಊರಿನಲ್ಲಿ.ಆತ ಯಾರೋ ಪ್ರಮುಖ ಪಕ್ಷವೊಂದರ ಮುಖಂಡ,ಆ ಕಾರಣಕ್ಕಾಗಿ ತನಿಖೆ ಬಿರುಸಾಗಿದೆ.ಪ್ರತ್ಯಕ್ಷ ದರ್ಶಿಯೊಬ್ಬನ ಪ್ರಕಾರ ಎರಡ್ಮೂರು ಜನರಿದ್ರು ಲೋಕಲ್ ಜನ ಅದರಲ್ಲೊಬ್ಬ ಗಡ್ಡಧಾರಿ ವಯಸ್ಸು ಸುಮಾರು ಮೂವತ್ತೈದರಿಂದ ನಲವತ್ತು ಕಪ್ಪು ಜ್ಯಾಕೆಟ್ ಧರಿಸಿದ್ದ.ನಮ್ ಗ್ರಹಚಾರಕ್ಕೆ ಗಾಡೀಲಿ ಎರಡು ಲೋಕಲ್ ವ್ಯಕ್ತಿಗಳಿದ್ರು ಅವರ ಹೋಲಿಕೆ ಹಾಗೂ ವಯಸ್ಸು ಪ್ರತ್ಯಕ್ಷದರ್ಶಿಯ ಹೇಳಿಕೆಗೆ ಹೋಲಿಕೆಯಾಗ್ತಿತ್ತು ಕಪ್ಪು ಜಾಕೆಟ್ ಬೇರೆ ಇತ್ತು ಇಷ್ಟು ಸಾಕಿತ್ತು ಆ ತಕ್ಷಣಕ್ಕೆ ಏನಾದರೂ ಮಾಡಿದ್ದೇವಂತ ತೋರಿಸಬೇಕಿತ್ತು ಅನುಮಾನಾಸ್ಪದವಾಗಿ ಕಂಡವರನ್ನೆಲ್ಲಾ ಕರೆತಂದು ಗುಡ್ಡೆ ಹಾಕುತ್ತಿದ್ದಾಗ ಸಿಕ್ಕ ನಮ್ಮನ್ನೂ ಏನೋ ಸಾಧಿಸಿದವರಂತೆ ಹಿಡಿದು ಕೂರಿಸಿಕೊಂಡಿದ್ದಾರೆ.....
ಕೊನೆಗೂ ಆ ಹುಡುಗರೂ ಆಫೀಸರ್ ಕರೆತಂದಿದ್ನಲ್ಲ ಲೋಕಲ್ ಜನರು,ಅವ್ರೂ ಸತ್ಯ ಬಾಯ್ ಬಿಟ್ಟಿದ್ರಿಂದಾಗಿ ಎಲ್ಲವೂ ಸ್ಪಷ್ಟವಾಗಿದೆ,ಯಾರು ಎತ್ತ ಎಂಬುದರ ಜೊತೆಗೇ ಆರೋಪಿಗಳ ವಿವರಗಳೂ ಈಗೆಲ್ಲಿ ತೆರಳಿರಬಹುದೆಂಬ ಮಾಹಿತಿಯೂ ಸೇರಿ....
ಅಂತೂ ಒಂದಿಡೀ ರಾತ್ರಿ
ಏನೇನೋ ಊಹೆಯಲ್ಲಿ,ಏನಾಗಿರಬಹುದೆಂಬ ಗೊಂದಲದಲ್ಲಿ,ಮುಂದೇನಾಗಬಹುದು ಎಂಬುದೇ ಗೊತ್ತಿರದ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೆಯೋ ಎರಡು ಡಿಗ್ರೀ ಛಳಿಯಲ್ಲಿ ರಾಮ್ ಬನ್ ಪೊಲೀಸ್ ಸ್ಟೇಷನ್ ಬೆಂಚ್ ಬಿಸಿಮಾಡಿ ಸೂರ್ಯೋದಯದ ಸಮಯಕ್ಕೆ ನಿರಾಳವಾಗಿ ಹೊರಬರೋ ಮುಖಾಂತರ
ಈ ಪ್ರಕರಣಕ್ಕೊಂದು ಸುಖಾಂತ್ಯದ ಇತಿಶ್ರೀ ಹಾಡಲಾಯ್ತು.
:- ಸುಧೀರ್ ಸಾಗರ್.

No comments:
Post a Comment